Monday, January 13, 2020

ಅಶ್ವಗಂಧ ಎಂಬುದು ಒಂದು ಔಷಧಿಗಿಡ



ಅಶ್ವಗಂಧ ಎಂಬುದು ಒಂದು ಔಷಧಿಗಿಡ. ಹಿರಿಯರಿಂದ 'ಹಿರೇಮದ್ದು' ಎಂದೇ ಕರೆಸಿಕೊಳ್ಳುವ ಈ ಸಸ್ಯ, ನರಸಂಬಂಧಿ, ಕಫ ವಾತ ಸಂಬಂಧಿ ದೋಷಗಳನ್ನು ಕಿತ್ತು ಕಳೆಯಬಲ್ಲ ಗುಣವಿದೆ.

ಈ ಗಿಡದ ಬೇರಿಗೆ ಲೈಂಗಿಕ ದೌರ್ಬಲ್ಯ ನಿವಾರಿಸುವ ಅದ್ಬುತ ಸಾಮರ್ಥ್ಯವಿದೆ. ಹಾವು, ಚೇಳು ಕಚ್ಚಿದಾಗ ಇದರ ಬೇರನ್ನು ನಿಂಬೇ ರಸದೊಂದಿಗೆ ಹಚ್ಚಲು ಉಪಯೋಗಿಸುತ್ತಾರೆ.

ಆಯುರ್ವೇದ ಪಂಡಿತರು ಸಂಸ್ಕೃತದಲ್ಲಿ ಇದಕ್ಕೆ ನೀಡಿದ ಹೆಸರು ವಾಜೀಗಂಧಾ, ಹಯಗಂಧಾ, ವರಾಹಕರ್ಣೀ ಇತ್ಯಾದಿ. ಈ ಸಸ್ಯದ ಬೇರಿನಿಂದ ಕುದುರೆ ಮೂತ್ರದಂತಹ ವಾಸನೆ ಹೊರಡುತ್ತದೆಯಾದ್ದರಿಂದ ಅಲ್ಲದೆ ಇದರ ಬೇರನ್ನು ಸ್ವಚ್ಚಗೊಳಿಸಿ ಪುಡಿ ಮಾಡಿ ಸೇವಿಸಿದರೆ ಅಶ್ವದಂತೆ ಶಕ್ತಿಬಲ-ಉತ್ಸಾಹ ಬರುತ್ತದೆಯಾದ್ದರಿಂದ ಇದಕ್ಕೆ ಅಶ್ವಗಂಧಾ ಎಂಬ ನಾಮವು ಬಂದಿದೆ. ಇಂಗ್ಲೀಷ್ ನಲ್ಲಿ ಇದಕ್ಕೆ ವಿಂಟರ್ ಚೆರ್ರಿ ಎನ್ನುತ್ತಾರೆ. ಗುಜರಾತ್, ರಾಜಾಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಪಂಜಾಬ್, ಮಹಾರಾಷ್ಟ್ರ, ವಾಯವ್ಯ ಭಾರತ, ಕರ್ನಾಟಕ ಮುಂತಾದೆಡೆಯಲ್ಲಿ ಈ ಗಿಡವನ್ನು ಕಾಣಬಹುದು.

ಸೊಲನೇಸೀ ಕುಟುಂಬಕ್ಕೆ ಸೇರಿದ, ಔಷಧೀಯ ಮಹತ್ತ್ವವುಳ್ಳ ಸಸ್ಯ (ಪಿಂಟರ್ ಚೆರ್ರಿ). ಕನ್ನಡದಲ್ಲಿ ಹಿರೇಮದ್ದಿನ ಗಿಡ ಎಂಬ ಹೆಸರೂ ಇದಕ್ಕಿದೆ. ಇದರ ವೈಜ್ಞಾನಿಕ ಹೆಸರು ವಿತಾಸಿಯ ಸಾಮ್ನಿಫೆರ. ಸು. 1 ಮೀ ಎತ್ತರಕ್ಕೆ ಬೆಳೆಯುವ ಮೂಲಿಕೆ. ಆಫ್ರಿಕ, ಮೆಡಿಟರೇನಿಯನ್ ಪ್ರದೇಶ ಹಾಗೂ ಭಾರತದಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ.

ಅಶ್ವಗಂಧ ಬೆಳೆಯಿಂದ ದೊರೆಯುವ ಆಲ್ಕಲಾಯ್ಡ್‌ಗಳಲ್ಲಿ ಮಿಥಾನಿನ್ ಮತ್ತು ಸಾಮ್ನಿಫೆರಿನ್ ಸಸ್ಯಕ್ಷಾರ ಮುಖ್ಯವಾದುವು. ಆಯುರ್ವೇದ ಹಾಗೂ ಯುನಾನಿ ಔಷಧಿಗಳ ತಯಾರಿಕೆಯಲ್ಲಿ ಇದರ ಬೇರು, ತೊಗಟೆ, ಎಲೆ, ಹಣ್ಣು ಮತ್ತು ಬೀಜಗಳು ಅನೇಕ ರೋಗಗಳ ನಿವಾರಣೆಗೆ ಉಪಯುಕ್ತವಾಗಿವೆ.

ವರ್ಣನೆ
ಇದು ಒಂದರಿಂದ ಮೂರು ಅಡಿ ಎತ್ತರಕ್ಕೆ ಬೆಳೆಯುವ ಸುಂದರ ಪೊದೆ. ಇದರ ಎಲೆಗಳು ಆಡುಸೋಗೆಯ ಎಲೆಗಳನ್ನು ಹೋಲುವವು. ಆದರೆ ಅದಕ್ಕಿಂತ ಚಿಕ್ಕವು ಮತ್ತು ಅಷ್ಟು ಉದ್ದವಿರುವುದಿಲ್ಲ. ಎಲೆಗಳನ್ನು ಕೈಗಳಲ್ಲಿ ಉಜ್ಜಿದರೆ ಕುದುರೆಯ ಮೂತ್ರದ ವಾಸನೆ ಬರುವುದು.

ಆದುದರಿಂದ ಈ ಮೂಲಿಕೆಗೆ ಅಶ್ವಗಂಧ ಎನ್ನುವರು. ರುಚಿಯಲ್ಲಿ ಕಹಿ. ಎಲೆಗಳು ಬೂದು ಬಣ್ಣದ ರೋಮಗಳಿಂದ ಕೂಡಿರುವವು. ಹೂಗಳು ಹಸಿರು, ಹಳದಿ ಬಣ್ಣದ ಗೊಂಚಲುಗಳು, ಹಣ್ಣು ಕೆಂಪಾಗಿರುವುದು ಮತ್ತು ಹೊದಿಕೆಯಿಂದ ಕೂಡಿರುವುದು. ಈ ಹೊದಿಕೆಯೊಳಗಡೆಯಿಂದ ಇದರ ಹಣ್ಣು ನೋಡಲು ಮನ ಮೋಹಕವಾಗಿರುವುದು. ಬೇರುಗಳು ಬಿಳಿ ಮತ್ತು ನಸುಹಳದಿ ಬಣ್ಣದಿಂದ ಕೂಡಿರುವುದು

ಸರಳ ಚಿಕಿತ್ಸೆಗಳು

ಎಲೆ ಹಣ್ಣು ಮತ್ತು ಬೇರು ಚಿಕಿತ್ಸೆಗಳಲ್ಲಿ ಉಪಯೋಗಿಸುವರು. ಬಹು ಹಿಂದಿನ ಕಾಲದಿಂದಲೂ ಬಳಕೆಯಲ್ಲಿರುವ ಔಷಧಿ. ಬೇರಿನಲ್ಲಿ ಸೋಮ್ನಿಫೆರಸ್ ಅನ್ನುವ ಕ್ಷಾರವಿರುವುದು. ಈ ಕ್ಷಾರವು ನಿದ್ದೆ ಬರಿಸುವ ಸಾಮಥ್ರ್ಯ ಹೊಂದಿದೆ. ಸರ್ವ ರೋಗಕ್ಕೆ ಮದ್ದು ಹಿರೇಮದ್ದು ಎಂದು ನಾಣ್ನುಡಿ. ಸತ್ಯವೂ ಹೌದು.

ಇದು ರಕ್ತ ಶುದ್ಧಿ ಮಾಡಿ, ರಕ್ತ ವೃದ್ಧಿ ಮಾಡಿ ದೇಹಕ್ಕೆ ಕಾಂತಿ ಮತ್ತು ಪುಷ್ಟಿಯನ್ನು ಕೊಡುವುದು. ನಿಶ್ಶಕ್ತಿಯನ್ನು ನೀಗುವುದು ಹಾಗೂ ಗೆಲ್ಲುವ ಶಕ್ತಿಯಿದೆ. ಈ ವನೌಷಧಿ ಸೇವನೆಯಿಂದ ಸಂವೋಹಕಾರಿ ಚಿತ್ತ ಚಂಚಲತೆ, ಗಾಬರಿ ದೂರವಾಗುವುವು. ಮಕ್ಕಳಿಗೆ ಪುಷ್ಟಿ ನೀಡಿವುದು, ವೃದ್ಧಾಪ್ಯದ ದೌರ್ಬಲ್ಯಗಳನ್ನು ನೀಗಿ ಶಕ್ತಿ, ಸ್ಫೂರ್ತಿ ಮತ್ತು ಯೌವನವನ್ನು ಕೊಡುವುದು.

ಪುಷ್ಟಿ ಮತ್ತು ಶಕ್ತಿಗಾಗಿ (ಮಕ್ಕಳ ಮತ್ತು ವಯಸ್ಸಿನವರ)
100 ಗ್ರಾಂ ಅಶ್ವಗಂಧ ಬೇರನ್ನು ತಂದು ಹಾಲಿನಲ್ಲಿ ಬೇಯಿಸಿ ಶುದ್ಧ ಮಾಡಿ, ಒಣಗಿಸಿ, ಚೂರ್ಣಿಸಿ, ಗಾಜಿನ ಭರಣಿಯಲ್ಲಿಡುವುದು. ಸಮ ಪ್ರಮಾಣ ಸಕ್ಕರೆ ಸೇರಿಸಿ ಹೊತ್ತಿಗೆ 5 ಗ್ರಾಂನಷ್ಟು ಚೂರ್ಣವನ್ನು ತಿಂದ ಮೇಲೆ ಸಕ್ಕರೆ ಬೆರೆಸಿದ ಹಾಲನ್ನು ಪಾನ ಮಾಡುವುದು.

ನೋವು ಮತ್ತು ಬಾವುಗಳು
ಈ ವನೌಷಧವು ಎಲ್ಲಾ ರೀತಿಯ ಬಾವು ಮತ್ತು ನೋವುಗಳನ್ನು ನಿವಾರಿಸುವುದು. ಕೀಲುಗಳಲ್ಲಿ ನೋವು ಮತ್ತು ಊತವಿದ್ದರೆ ಇದರ ಎಲೆಗಳಿಗೆ ಎಣ್ಣೆ ಸವರಿ ಬಿಸಿ ಮಾಡಿ ನೋವಿರುವ ಜಾಗದಲ್ಲಿ ಕಟ್ಟುವುದು.

ಪ್ರಜ್ವಲ ದೃಷ್ಟಿಗೆ
ಅಶ್ವಗಂಧ ಚೂರ್ಣವನ್ನು ನೆಲ್ಲಿಕಾಯಿ ರಸದಲ್ಲಿ ಕಲಸಿ, ತುಪ್ಪ ಮತ್ತು ಜೇನುತುಪ್ಪವನ್ನು ಅಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸಬೇಕು. ದೃಷ್ಟಿದೋಷಗಳು ನಿವಾರಣೆ ಆಗಿ ಕಣ್ಣು ದೃಷ್ಟಿ ಪ್ರಜ್ವಲವಾಗುವುದು. ಕಣ್ಣುಗಳನ್ನು ತ್ರಿಫಲ ಚೂರ್ಣದ ನೀರಿನಲ್ಲಿ ತೊಳೆಯುವುದು.

ವೃದ್ಧಾಪ್ಯದ ದೌರ್ಬಲ್ಯತೆಗೆ ಮತ್ತು ಶಕ್ತಿಗೆ
ಅಶ್ವಗಂಧದ ಬೇರುಗಳನ್ನು ಹಾಲಿನಲ್ಲಿ ಶುದ್ಧ ಮಾಡಿ ಒಣಗಿಸಿ ಚೂರ್ಣ ಮಾಡಿ, ಶೋಧಿಸಿಟ್ಟುಕೊಳ್ಳುವುದು, ಹೊತ್ತಿಗೆ ಎರಡೂವರೆ ಗ್ರಾಂನಷ್ಟು ಚೂರ್ಣವನ್ನು ತಿಂದ ಮೇಲೆ ಸಕ್ಕರೆ ಸೇರಿಸಿದ ಹಾಲನ್ನು ಕುಡಿಯುವುದು.

ಸ್ತ್ರೀಯರ ಮುಟ್ಟಿನ ದೋಷಗಳು
ಶುದ್ಧಿ ಮಾಡಿದ ಅಶ್ವಗಂಧ ಚೂರ್ಣ, ಲೋದ್ರ ಚಕ್ಕೆ ಚೂರ್ಣ ಮತ್ತು ನೆಲಗುಂಬಳದ ಗಡ್ಡೆ ಚೂರ್ಣ ಸಮ ಭಾಗ ಸೇರಿಸಿ, ಹೊತ್ತಿಗೆ 2.50 ಗ್ರಾಂ ಸೇವಿಸಿ, ಮೇಲೆ ಕಲ್ಲುಸಕ್ಕರೆ ಬೆರೆಸಿದ ಹಸುವಿನ ಹಾಲು ಒಂದು ಲೋಟ ಸೇವಿಸಿವುದು.

ಈ ರೀತಿ ದಿನಕ್ಕೆ ಬೆಳಿಗ್ಗೆ ಸಾಯಂಕಾಲ ಎರಡು ಬಾರಿ ಸೇವಿಸುವುದು. ಈ ಔಷಧಿಯನ್ನು ಸೇವಿಸುವ ಅವಧಿಯನ್ನು ನಿರ್ಮಲಚಿತ್ತ, ಶಾಂತಸ್ವಭಾವ ಮತ್ತು ಶುಭಯೋಚನೆಗಳಿರಲಿ. ಇದರಿಂದ ಮಾನಸಿಕ ಚಂಚಲತೆ ಜೀವನದಲ್ಲಿ ಜಿಗುಪ್ಸೆ ಶಮನವಾಗುವುವು.

ಗರ್ಭಧಾರಣೆ
ಕೆಲವು ಕಾರಣಗಳಿಂದ ಸ್ತ್ರೀಯರಿಗೆ ಸಂತಾನವಿರುವುದಿಲ್ಲ. ದೋಷಗಳು ಸ್ತ್ರೀ ಪುರುಷರಿಬ್ಬರದು ಇರಬಹುದು. ಆದುದರಿಂದ ಶುದ್ಧ ಮಾಡಿದ ಅಶ್ವಗಂಧದ ಚೂರ್ಣವನ್ನು ಸ್ತ್ರೀ ಪುರುಷರಿಬ್ಬರೂ ಸೇವಿಸಬಹುದು. ಭಗವಂತನ ದಯೆಯಿಂದ ಮಕ್ಕಳಾಗುವವು. ಹಾಲು, ಅನ್ನ ಮತ್ತು ಮಧುರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದು.

ಬಂಜೆತನ ದೂರವಾಗಲು
25 ಗ್ರಾಂ ಶುದ್ಧ ಮಾಡಿದ ಅಶ್ವಗಂಧದ ಚೂರ್ಣಕ್ಕೆ ಅರ್ಧ ಲೀಟರ್ ಹಾಲು ಹಾಕಿ ಕಾಯಿಸುವುದು. ಅಷ್ಟಾಂಷ ಕಷಾಯ ಮಾಡಿ ಇಟ್ಟುಕೊಳ್ಳುವುದು. ಮುಟ್ಟಿನ ಸ್ನಾನದ ನಂತರ 4 ಟೀ ಚಮಚ ಕಷಾಯವನ್ನು ಹಸುವಿನ ಹಾಲಿಗೆ ಸಕ್ಕರೆ, ತುಪ್ಪವನ್ನು ಸೇರಿಸಿ ಸೇವಿಸುವುದು. ಹೀಗೆ ಮೂರು ಮುಟ್ಟಿನಲ್ಲಿ ಕ್ರಮವಾಗಿ ಮಾಡುವುದು.

ಹಳೆಯ ಅಸಾಧ್ಯ ಜ್ವರದಲ್ಲಿ ಸಂಪಾದಿಸಿ
30 ಗ್ರಾಂ ಅಮೃತಬಳ್ಳಿಯ ಸತ್ವಕ್ಕೆ 40 ಗ್ರಾಂ ಶುದ್ಧ ಮಾಡಿದ ಅಶ್ವಗಂಧದ ಚೂರ್ಣವನ್ನು ಸೇರಿಸಿಟ್ಟುಕೊಳ್ಳುವುದು. ಒಂದು ವೇಳೆಗೆ ಎರಡೂವರೆ ಗ್ರಾಂನಷ್ಟು ದಿನಕ್ಕೆ ಎರಡು ಬಾರಿ ಜೇನುತುಪ್ಪದೊಂದಿಗೆ ಸೇವಿಸಿವುದು.

ವಾತಕ್ಕೆ
ಅಶ್ವಗಂಧದ ಬೇರು ಮತ್ತು ಒಣಶುಂಠಿಯ ನಯವಾದ ಚೂರ್ಣ ಮತ್ತು ಕಲ್ಲಸಕ್ಕರೆ ಸೇರಿಸಿ ಬೆಳಿಗ್ಗೆ, ಸಂಜೆ ಸೇವಿಸುವುದು.

ಗಂಡಸರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ
ಕೆಲವು ವೇಳೆ ಗಂಡಸರ ವೀರ್ಯದಲ್ಲಿ ವೀರ್ಯಾಣುಗಳು ಇರಲೇಬೇಕಾದ ಸಂಖ್ಯೆಗಿಂತ ಕಡಿಮೆಯಿರುವುವು. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಾಗುವುದಿಲ್ಲ. ಅಶ್ವಗಂಧ, ವಿದಾರಿಕಾಂಡ, ನೆಗ್ಗಿಲು ಮತ್ತು ಕಾಮೆ ಬೀಜಗಳಿಗೆ ಚೂರ್ಣವನ್ನು ಸೇರಿಸಿ, ತಜ್ಞರ ಮೇಲ್ವಿಚಾರಣೆಯಲ್ಲಿ ಜೇನುತುಪ್ಪ ಸೇರಿಸಿ ಸೇವಿಸಬೇಕು. ಹೀಗೆ ಒಂದೆರಡು ತಿಂಗಳು ಮಾಡುವುದು ಹಾಗೂ ಆಗಾಗ ವೈದ್ಯಕೀಯ ಪರೀಕ್ಷೆ ಮಾಡಿಸಿ ಫಲಿತಾಂಶವನ್ನು ಗಮನಿಸುವುದು. ನೈಸರ್ಗಿಕ ರೀತಿಯಲ್ಲಿ ದೋಷ ಪರಿಹಾರವಾಗಿ ಮಕ್ಕಳಾಗುವುವು.

ಬೆನ್ನು ನೋವಿನಲ್ಲಿ
10 ಗ್ರಾಂ ಶುದ್ಧಿ ಮಾಡಿದ ಅಶ್ವಗಂಧದ ನಯವಾದ ಪುಡಿ ಮತ್ತು 10ಗ್ರಾಂ ಕೆಂಪು ಕಲ್ಲುಸಕ್ಕರೆ ಪುಡಿಯನ್ನು ಒಂದು ಬಟ್ಟಲು ಬಿಸಿ ಹಾಲಿನಲ್ಲಿ ಸೇರಿಸಿ ಬೆಳಿಗ್ಗೆ ಮತ್ತು ಸಾಯಂಕಾಲ ಸೇವಿಸುವುದು. ಅಶ್ವಗಂಧದ ಎಲೆಗಳಿಗೆ ಎಳ್ಳೆಣ್ಣೆ ಸವರಿ ಸ್ವಲ್ಪ ಬಿಸಿ ಮಾಡಿ ನೋವಿರುವ ಜಾಗದಲ್ಲಿ ಕಟ್ಟುವುದು. ಪ್ರತಿ ದಿವಸ ಎರಡು, ಮೂರು ಸಾರಿ ಈ ರೀತಿ ಮಾಡುವುದು.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು


No comments:

Post a Comment

ಶುಗರ್ ಹತೋಟಿಗೆ ತರಲು ಸುಲಭ ವಿಧಾನ:

ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶು...